Saturday, 20 July 2019

ಇನ್ನೆಷ್ಟು ದಿನ

ಬರದ ನಾಡಿನಲ್ಲಿ ಬರಿಕಾಲಿನಲ್ಲಿ
ನಿಂತ ರೈತ ತಲೆ ಎತ್ತಿ
ಸುಡು ಬಿಸಿಲ ಆಗಸವನ್ನು ನೋಡದೆ
ತಲೆ ತಗ್ಗಿಸಿ ಬಾಯ್ ಬಿಟ್ಟ
ಭುವಿಯನ್ನು ನೋಡದೆ
ದೂರದಲ್ಲಿ ಬೋಳಾಗಿ ಒಣಗಿ
ನಿಂತ ಮರವನ್ನೆ ನೋಡುತ್ತ
ನುಡಿದ ನನ್ನ ಅಂತೆಯೆ ಉಸಿರ ಬಿಗಿಹಿಡಿದು ನಿಂತು ಬಿಡು  ಓ ಜೀವವೆ
ಇನ್ನೆಷ್ಟು ದಿನ ಇನ್ನೆಷ್ಟು ದಿನ!

ದೂರದಲೆಲ್ಲೊ ಪಟಾಕಿಗಳ ಸದ್ದು
ಸಿಹಿ ತಿನಿಸುಗಳ ಊಟ ಅಧಿಕಾರದ ಕಿತ್ತಾಟ ನನ್ನಿಂದಲ್ಲ ಅವನಿಂದ
ಅವನ್ನಿಂದಾಗದು ನನ್ನಿಂದೆಂಬ ಜೋರು ಕಹಳೆ
ಇಲ್ಲೆಲ್ಲೊ ತಾಯ ಎದೆಯಲ್ಲಿ ಹಾಲಿಲ್ಲದೆ ಕಣ್ಣು ಮುಚ್ಚಿದ ಹಸುಳೆ
ತಾಯ ಆಕ್ರಂದನ ಮುಗಿಲು ಮುಟ್ಟಿತು
ಇನ್ನೆಷ್ಟು ದಿನ ಇನ್ನೆಷ್ಟು ದಿನ!

ಮನ್ನವಾದರೇನು ನಾ ಮಾಡಿದ ಇಂತಿಷ್ಟು ಸಾಲ
ತರಲಾದೀತೆ  ಕೂಡಿಟ್ಟು ನಾ ಹುತ್ತು ಬಿತ್ತಿದ್ದನ್ನೆಲ್ಲಾ
ಮನೆಯ ಹಸಿವ ನೀಗಿಸಲು
ಮಾರಾಯ್ತು ಇದ್ದಿದ್ದೆಲ್ಲಾ
ನನ್ನೀ ನೋವು ನೀಗಲು ಇರುವುದೊಂದಿಷ್ಟು ಹೊಲ ಕೈ ಹಿಡಿಯುವವರೆಗು
ಬರದಿರು‌ ನೀ ಸಾವೆ
ಇನ್ನೆಷ್ಟು ದಿನ ಇನ್ನೆಷ್ಟು ದಿನ!

ಅಮ್ಮಾ ಬೇಡುತ್ತಿರುವೆ ಭೋರ್ಗರೆದು
ಸುರಿದು ಬಿಡಲಿ ಗಂಗೆ
ಕೊಟ್ಟಿಗೆಯಲ್ಲಿ ಕಟ್ಟಿದ ರಾಮ ಕೃಷ್ಣರಿಗೊಂದಷ್ಟು ಮೇವಾಕಿ ನೀರಾಡಿಸಿ ನೇಗಿಲಿಗೆ ಕೈಮುಗಿದು  ಮುಂಜಾನೆಯಿಂದ ಮುಸ್ಸಂಜೆವರೆಗು ಹುತ್ತಿ ಬಿತ್ತು ನಿನ್ನನ್ನೆ ಕಾದು, ಕಳೆ ಸೊಕದೆ ನೀ ಸೊಂಪಾಗಿ ಬೆಳೆದು, ಹಸಿರ ಸಿರಿಯಲ್ಲಿ ನೀ ನಲಿಯುವುದು ಅದೆಷ್ಟು ಹೊತ್ತು
ಇನ್ನೆಷ್ಟು ದಿನ ಇನ್ನೆಷ್ಟು ದಿನ!

ಮನೆಯಂಗಳದಿ ರಾಶಿ ರಾಗಿಯ ಸುರಿದು
ಮನೆಯ ಸೂರಿಗೆಲ್ಲಾ ಭತ್ತದ ತೆನೆ ತೂಗಿ
ದವಸ ಧಾನ್ಯವ ಸೇರಲ್ಲಿ ಅಳೆದು
ದುಡಿದ ನನ್ನೆಲ್ಲಾ ಒಡಹುಟ್ಟಿದವರ ಹುಡಿಯ ತುಂಬಿ, ನನ್ನ ಸಂಸಾರಕಿಷ್ಟೆಂದು ಎತ್ತಿಟ್ಟು,
ಹಸಿದ ಹೊಟ್ಟೆಯ ರುಚಿ ರೈತ ನಾ ಅರಿತಿರುವೆ
ನೀಡಿ ಬಿಡುವೆನು, ಕೊಟ್ಟಷ್ಟು ಕೊಡಲಿ
ನನಗದೆ ಸಾಕೆಂದು‌ ಭೂತಾಯಿಗೆ ನಮಿಸಿ
ಇನ್ನೆಷ್ಟು ದಿನ  ಇನ್ನೆಷ್ಟು ದಿನ!

ದಿವ್ಯ ಭರತ್
ಮೈಸೂರು...

9 comments:

  1. ಅನ್ನದಾತನ ಸಂಕಷ್ಟ, ತ್ಯಾಗ, ತಾಳ್ಮೆ ಮತ್ತು ಶೋಷಣೆಯನ್ನು ನುಂಗಿಕೊಳ್ಳುವ ಘನ ವ್ಯಕ್ತಿತ್ವ ಇಲ್ಲಿ ಸಾಲು ಸಾಲುಗಳಲ್ಲೂ ಮೂಡಿ ಬಂದಿದೆ.

    ನಡುವೆ ಕೆ.ಎಸ್. ನಿಸಾರ ಅಹಮದ್‌ರ ನಾಡ ದೇವಿಯೇ ಕವನವನ್ನೂ ನೆನಪಿಸಿತು.

    ಈಗ ತಾನೇ ಬ್ಲಾಗ್ ಲಿಂಕ್ ಸಿಕ್ಕಿದೆ.ನಾನು ಬ್ಲಾಗುಗಳ ವೀರಾಭಿಮಾನಿ. ಪೂರ್ತಿ ಬ್ಲಾಗ್ ಓದುವೆ.

    ReplyDelete
    Replies
    1. ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು.. ನಿಮ್ಮ ಪ್ರೋತ್ಸಾಹ ಹೀಗೆ ಇರಲಿ ಮತ್ತಷ್ಟು ಬರೆಯಲು ಪ್ರಯತ್ನಿಸುವೆ.

      Delete
  2. ಈ ಕವನ ನೋಡಿದೆ ದಿವ್ಯಾಳ ವಾಲ್‌ ಮೇಲೆ...ಬದರಿ ದೆಸೆಯಿಂದ ಬ್ಲಾಗ್‌ ಗೆ ಈಗ ಲಗ್ಗೆ...
    ಚಂದದ ಭಾವಪೂರ್ಣ ಪದಗಳ ಸಾಲುಗಳು...

    ReplyDelete
    Replies
    1. ಧನ್ಯವಾದಗಳು.. ನಾನು ಬರೆದ ಸಾಲುಗಳು ಇಂದಿನ ನಮ್ಮ ರಾಜ್ಯದ ಸ್ಥಿತಿಯನ್ನು ಆಧರಿಸಿದ್ದು..

      Delete
  3. ಬಹಳ ಇಷ್ಟವಾಯಿತು. ಪ್ರಸುಸ್ತ ಸನ್ನಿವೇಶವನ್ನು ಅದೆಷ್ಟು ಸರಳವಾಗಿ ಸೆರೆ ಹಿಡಿದು ಬಡಿಸಿದ್ದೀರಿ. ಮುಖ್ಯವಾಗಿ ವಿಶೇಷವಾಗಿ ನನ್ನ ಗಮನ ಸೆಳೆದಿದ್ದು ಪ್ರಾಸಕ್ಕೆ ಕಟ್ಟು ಬೀಳದೆ. ಬರೆದಿರುವುದು. ಹೀಗೆಯೇ ನಿಮ್ಮ ಪಯಣ ಸಾಗಲಿ. ಅಭಿನಂದನೆ

    ReplyDelete
  4. This comment has been removed by the author.

    ReplyDelete
    Replies
    1. ಪ್ರಾಸಕ್ಕಾಗಿ ಕೆಲವೊಮ್ಮೆ ಕಾಲ್ಪನಿಕ ಕವನಗಳನ್ನು ಬರೆದಿದ್ದೀನಿ ಸರ್.. ಆದರೆ ಇದು ಪ್ರಸ್ತುತ ನಮ್ಮ ರಾಜ್ಯದ ಪರಿಸ್ಥಿತಿ ಇಲ್ಲಿ ಪ್ರಾಸಕ್ಕಿಂತ ವಾಸ್ತವ ಹೆಚ್ಚು ಕಾಡಿತು.. ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು ಸರ್

      Delete